ಢಾಕ: ಬಾಂಗ್ಲಾದೇಶ ಟಿವಿ ಪತ್ರಕರ್ತೆ ಸುಬರ್ಣ ನೋಡಿ ಹತ್ಯೆ ಘಟನೆಯನ್ನು ಬಾಂಗ್ಲಾದೇಶದ ಮಾಧ್ಯಮ ಒಕ್ಕೂಟ ತೀವ್ರವಾಗಿ ಖಂಡಿಸಿದ್ದು ಪಬ್ನ ಜಿಲ್ಲೆಯಲ್ಲಿನ ಅವರ ಸ್ವಗೃಹದಲ್ಲಿ ಮಂಗಳವಾರ ರಾತ್ರೆಗಂಟೆಗೆ ಸುಬರ್ಣರ ಹತ್ಯೆ ನಡೆದಿತ್ತು.
ಸುಬರ್ಣ ನೋಡಿ(32) ಆನಂದ ಟಿವಿ ಪತ್ರಕರ್ತೆಯಾಗಿದ್ದು ನಿನ್ನೆ ರಾತ್ರೆ ಹತ್ತು ಗಂಟೆಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮನೆಯ ಬಾಗಿಲು ಬಡಿದಿತ್ತು. ನಂತರ ಸುಬರ್ಣ ಬಾಗಿಲು ತೆರೆದಾಗ ಒಳನುಗ್ಗಿ ಮಾರಕ ಆಯುಧಗಳಿಂದ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಸುಬರ್ಣರನ್ನು ಸ್ಥಳೀಯರು ಪಬ್ನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯದರು ಪ್ರಯೋಜನವಾಗಲಿಲ್ಲ.
ಸುಬರ್ಣ ಪತಿಯಿಂದ ಬೇರೆಯಾಗಿ ಒಂಬತ್ತು ವರ್ಷದ ಪುತ್ರಿಯ ಜೊತೆ ಅವರು ವಾಸಿಸುತ್ತಿದ್ದರು. ದುಷ್ಕರ್ಮಿಗಳ ತಂಡದಲ್ಲಿ ಹತ್ತಕ್ಕೂ ಹೆಚ್ಚು ಜನರಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಲೆಗೆ ಕಾರಣವೇನೆಂದು ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಹೆಚ್ಚುವರಿಎಸ್ಪಿ ಗೌತಂ ಕುಮಾರ್ ಬಿಸ್ವಾಸ್ ತಿಳಿಸಿದ್ದಾರೆ.
ಬಾಂಗ್ಲಾದೇಶ ಪತ್ರಕರ್ತರ ಒಕ್ಕೂಟ ಸುಬರ್ಣ ಕೊಲೆಯನ್ನು ತೀವ್ರವಾಗಿ ಖಂಡಿಸಿದ್ದು, ದುಷ್ಕರ್ಮಿಗಳನ್ನು ಬೇಗನೆ ಪತ್ತೆಹಚ್ಚಬೇಕೆಂದು ಆಗ್ರಹಿಸಿದೆ.