ನವದೆಹಲಿ: ಕರ್ನಾಟಕದ ಸ್ವಾಮಿ ವಿವೇಕಾನಂದ ಎಜುಕೇಷನಲ್ ಸೊಸೈಟಿ ಸೇರಿದಂತೆ ದೇಶದ ಒಟ್ಟು 1807 ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಈ ವರ್ಷ ವಿದೇಶಿ ದೇಣಿಗೆ ಸ್ವೀಕರಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಲವು ಬಾರಿ ಸೂಚನೆ ನೀಡಿದ ಬಳಿಕವೂ 6 ವರ್ಷಗಳವರೆಗೂ ವಿದೇಶಿ ನಿಧಿಯ ವಾರ್ಷಿಕ ಆಯವ್ಯಯ ಪ್ರಮಾಣಪತ್ರ ಸಲ್ಲಿಸದಿರುವ ಕಾರಣ ಈ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ತಡೆಹಿಡಿಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ವಿದೇಶಿ ಕಾಣಿಕೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ ಎ) ನೋಂದಣಿ ಅದಾಯ ಸಂಸ್ಥೆಗಳ ಪೈಕಿ ರಾಜಸ್ತಾನ ವಿಶ್ವವಿದ್ಯಾಲಯ, ಅಲಹಾಬಾದ್ ಅಗ್ರಿಕಲ್ಟರ್ ಇನ್ ಸ್ಟಿಟ್ಯೂಟ್, ಪಶ್ಚಿಮ ಬಂಗಾಳದ ರವೀಂದ್ರನಾಥ ಟಾಗೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಗುಜರಾತಿನ ವೈಎಂಸಿಎ, ಮಹಾರಾಷ್ಟ್ರದ ಬಾಪ್ಟಿಸ್ಟ್ ಕ್ರಿಶ್ಚಿಯನ್ ಅಸೋಸಿಯೇಷನ್, ತೆಲಂಗಾಣ ರಾಜ್ಯದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಸೇರಿವೆ ಜೊಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನ ಸ್ವಯಂ ಎಫ್ ಸಿಆರ್ ಎ ಕಾಯ್ದೆ ವ್ಯಾಪ್ತಿಯಿಂದ ತಮ್ಮ ಸಂಸ್ಥೆಯನ್ನು ಹೊರಗಿಡುವಂತೆ ಕೋರಿಕೆ ಸಲ್ಲಿಸಿತ್ತು. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 2014ರಿಂದ ಇದುವರೆಗೆ ಒಟ್ಟು 14,800 ಎನ್ಜಿಓ ಸಂಘಟನೆಗಳ ಎಫ್ ಸಿಆರ್ ಎ ನೋಂದಣಿ ರದ್ದುಪಡಿಸಿ ವಿದೇಶಿ ದೇಣಿಗೆ ಪಡೆಯದಂತೆ ನಿಷೇಧಿಸಿದೆ.