ಕೊಪ್ಪಳ :89 ನೇ ವಯಸ್ಸಿನಲ್ಲಿ ಪಿ.ಹೆಚ್ ಡಿ ಪರೀಕ್ಷೆ ಬರೆದ ಕೊಪ್ಪಳ ತಾಲ್ಲೂಕಿನ ಬಿಸರಳ್ಳಿ ಗ್ರಾಮದ ಸ್ವಾತಂತ್ರ್ಯ ಯೋಧ ಶರಣ ಬಸವರಾಜ ವೀರ ಬಸಪ್ಪ ಬಿಸರಳ್ಳಿ ರವರು ಎಲ್ಲರಿಗೂ ಸ್ಫೂರ್ತಿ ಯಾಗಿದ್ದಾರೆ. ಕಲಿಕೆಗೆ ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇದೊಂದು ಜೀವಂತ ಉದಾಹರಣೆಯಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಚನ, ದಾಸ ಸಾಹಿತ್ಯ ವಿಷಯವನ್ನು ಮುಂದಿಟ್ಟು ಅವರು ಪ್ರವೇಶ ಪರೀಕ್ಷೆ ಬರೆದಿದ್ದಾರೆ. 1929 ರಲ್ಲಿ ಹುಟ್ಟಿದ ಇವರು ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಸಕ್ರಿಯರಾಗಿ ಹೋರಾಡಿದವರು.
ಕವಲೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷರಿಗಿದ್ದ ಅವರು 1992 ರಲ್ಲಿ ನಿವೃತ್ತಿಯಾದರು. ಧಾರವಾಡ ವಿವಿಯಿಂದ ಕಾನೂನು ಪದವಿ,ಕನ್ನಡಲ್ಲಿ ಎಂಎ ಮತ್ತು ಹಂಪಿಯಿಂದ ಎಂಎ ಪಡೆದಿರುವ ಇವರು ಇದೀಗ ಪಿಹೆಚ್ಡಿ ಮಾಡಲು ಹೊರಟಿದ್ದಾರೆ.