ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಬಿಟ್ಟರೆ ಬೇರೆಲ್ಲ ಇತರ ಆಟಗಾರರಿಗೆ ನಮ್ಮ ದೇಶದಲ್ಲಿ ಮಾನ್ಯತೆ ಸಿಗುವುದಿಲ್ಲ ಎಂಬುದಕ್ಕೆ ಹಲವಾರು ಜ್ವಲಂತ ಉದಾಹರಣೆಗಳು ನಮ್ಮ ಮುಂದೆ ಇದೆ.
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್-2018 ಕ್ರೀಡಾ ಕೂಟದ “ಸೆಪಕ್ ತಕ್ರವ್” ಆಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಹರೀಶ್ ಕುಮಾರ್ ಅವರ ಕುಟುಂಬ ತೀವ್ರ ಬಡತನ ಎದುರಿಸುತ್ತಿದೆ. ಹೀಗಾಗಿ ಪದಕ ವಿಜೇತ ಕ್ರೀಡಾಪಟು ಹರೀಶ್ ಜೀವನ ಸಾಗಿಸಲು ದೆಹಲಿಯಲ್ಲಿರುವ ತಮ್ಮ ತಂದೆಯ ಅಂಗಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಜತೆ ಮಾತನಾಡಿರುವ ಹರೀಶ್, ನಮ್ಮ ಕುಟುಂಬ ದೊಡ್ಡದಿದೆ. ಆದರೆ, ಆದಾಯ ಮಾತ್ರ ಕಡಿಮೆ. ಅಂಗಡಿಯಲ್ಲಿ ಟೀ ಮಾರಾಟ ಮಾಡುವ ಮೂಲಕ ನಾನು ನನ್ನ ಕುಟುಂಬಕ್ಕೆ ನೆರವಾಗುತ್ತಿದ್ದೇನೆ. ಇದರ ನಡುವೆಯೂ ಮಧ್ಯಾಹ್ನ 2 ರಿಂದ 6 ಗಂಟೆ ವರೆಗೆ ನಾನು ಕ್ರೀಡಾಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನಾನೊಂದು ಉತ್ತಮ ನೌಕರಿ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.
ಏಷ್ಯಾನ್ ಗೇಮ್ಸ್ ನಲ್ಲಿ ಭಾರತದ ಗೌರವನ್ನು ಹೆಚ್ಚಿಸಿದ ಆಟಗಾರನಿಗೆ ಸರಕಾರದಿಂದ ಅರ್ಥಿಕ ಸಹಾಯ ಮತ್ತು ಒಂದು ಉತ್ತಮ ಉದ್ಯೋಗದ ಅವಶ್ಯಕತೆ ಖಂಡಿತ ಇದೆ!