ಲಕ್ನೋ : ರೈಲು ಹಳಿಯ ಮೇಲೆ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ನಡೆದುಕೊಂಡು ಹೋಗುತ್ತಿದ್ದ ಆರು ಮಂದಿ ಯುವಕರು ರೈಲು ಹರಿದು ಮೃತ ಪಟ್ಟ ದಾರುಣ ಘಟನೆ ಇಂದು ಫೆ.26ರ ಬೆಳಗ್ಗೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೀಲಾಖುಂವಾ ಎಂಬಲ್ಲಿ ರೈಲು ಹಳಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆನೆಗೆ ಸಂಬಂಧಿಸಿದ ಒಟ್ಟು ಏಳು ಮಂದಿ ಯುವಕರು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಎಲ್ಲರ ಕಿವಿಯಲ್ಲೂ ಇಯರ್ ಪೋನಿತ್ತು. ವೇಗದಿಂದ ಬರುತ್ತಿದ್ದ ರೈಲಿನ ಹಾರ್ನ್, ರೈಲಿನ ಸದ್ದು ಕೇಳಿಸಲಿಲ್ಲ. ಎಲ್ಲಿಯವರೆಗೆ ಅಂದರೆ ರೈಲು ತಮ್ಮ ಮೈಮೇಲೆ ಹರಿಯುವ ತನಕವೂ ಗೊತ್ತಾಗಲೇ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೃತಪಟ್ಟವರು ಹೆಸರು ಇಂತಿದೆ ಆಕಾಶ್, ರಾಹುಲ್ ಆರಿಫ್, ಸಮೀರ್, ಸಲೀಂ ಮತ್ತು ವಿಜಯ್ ಎಂದು ಗುರುತಿಸಲಾಗಿದೆ. ಮತ್ತೊರ್ವ ಏಳನೇ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಆರು ಜನರೂ ಕೂಲಿ ಕಾರ್ಮಿಕರು. ಇವರು ಘಾಜಿಯಾಬಾದ್ನಿಂದ ಬರುವ ರೈಲನ್ನು ಹತ್ತುವವರಿದ್ದರು. ಹೈದರಾಬಾದ್ನಲ್ಲಿ ಇವರಿಗೆ ಪೇಂಟಿಂಗ್ ಗುತ್ತಿಗೆ ಸಿಕ್ಕಿತ್ತು. ಆದರೆ ಇವರಿಗೆ ಆ ರೈಲು ತಪ್ಪಿಹೋಗಿತ್ತು. ಹಾಗಾಗಿ ಇವರು ಪೀಲಾಖುಂವಾಗೆ ಮರಳಲು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.