ಧ್ವನಿ: ನನ್ನ ಗೆಳತಿಯ ಬಗ್ಗೆ ನಾನು ಬರೆಯುತ್ತಿರುವುದು. ಅವಳು ಮಧ್ಯಮ ವರ್ಗದ ಕುಟುಂಬದ ಹೆಣ್ಣು. ಪದವಿ ಶಿಕ್ಷಣ ಪೂರ್ತಿ
ಗೊಳಿಸಲು ಆಕೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಪಿ.ಯು.ಸಿ.ಯಲ್ಲೇ ಓದು ಮುಗಿಸಿಕೊಂಡು ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು
ಕೆಲಸಕ್ಕೆ ಸೇರಿಕೊಂಡಳು. ಸೇಲ್ಸ್ ಗರ್ಲ್ ಆಗಿ ದುಡಿಯುತ್ತಿದ್ದಾಳೆ. 5 ಸಾವಿರ ಸಂಬಳ ಆಕೆಯ ಅಗತ್ಯ ಹಾಗೂ ಮನೆ ಖರ್ಚಿಗೆ ಸಾಕಾಗುತ್ತಿರಲಿಲ್ಲ.
ಅವಳಿಗೆ ಮೊದಲಿನಿಂದಲೂ ಉಡುಗೆ, ಶೃಂಗಾರದ ಬಗ್ಗೆ ಆಸಕ್ತಿ. ಒಳ್ಳೆಯ ವಸ್ತ್ರದಲ್ಲಿ ಅಭಿರುಚಿ ಜಾಸ್ತಿ. ದುಡಿಯುವ ಹಣ ಏನೇನೂ ಸಾಲದಾಗ ಆಕೆಯ ಆಪ್ತರೋರ್ವಳು ಅವಳನ್ನು ಸುಲಭವಾಗಿ ಕೈ ತುಂಬಾ ಹಣ ಗಳಿಸುವ ದಾರಿಗೆ ಕರೆದೊಯ್ದಳು. ಶಾಪಿಂಗ್ ಮಾಲ್ಗಳ ಮಾಲೀಕರ ಪರಿಚಯ ಆಕೆಗಾಯಿತು. ಅವರೊಂದಿಗೆ ಕೆಲವು ತಾಸು ಕಳೆದಾಗ ಸಿಗುವ ದುಡ್ಡು ಆಕೆಯ ಬಯಕೆಗಳನ್ನು ಪೂರೈಸುತ್ತಿತ್ತು. ಒಳ್ಳೆಯ ಭರ್ಜರಿ ಊಟ, ವಸ್ತ್ರ, ಶಾಪಿಂಗ್, ಪ್ರವಾಸದ ಮಜಾ ಎಲ್ಲವೂ ಅವಳಿಗೆ ತನ್ನ ಕೆಲವು ತಾಸುಗಳ ಪುರುಷ ಸಂಗಮದಿಂದ ದೊರಕಲು ಆರಂಭವಾದಾಗ ಆಕೆಗೆ ತನ್ನ ‘ಶೀಲ’ ಮುಖ್ಯ ಅನಿಸಲೇ ಇಲ್ಲ.
ಒಮ್ಮೆಗೆ ಐದಾರು ಸಾವಿರ (ದಿನಕ್ಕೆ) ಕೈ ತುಂಬಿದಾಗ ಅವಳ ಸಂತೋಷ ಇಮ್ಮಡಿಯಾಯಿತು. ಮನೆಯಲ್ಲಿ ಹೆತ್ತವರಿಗೆ ತನಗೆ ಕೆಲಸ
ದಲ್ಲಿ ಭಡ್ತಿ ದೊರಕಿದೆ ಎಂದು ಸುಳ್ಳು ಹೇಳುತ್ತಿದ್ದಳು. ತನ್ನ ಲಾಭದ ಉದ್ಯೋಗವನ್ನು ಬೇರೆ ಗೆಳತಿಯರಿಗೂ ಹೇಳಿ ಅವರನ್ನೂ ಹುರಿ
ದುಂಬಿಸಿ ತನ್ನೊಂದಿಗೆ ಬರುವಂತೆ ಒತ್ತಾಯಿಸುತ್ತಿದ್ದಳು. ಮನೆಯವರುಮಗಳ ಮದುವೆ ಬಗ್ಗೆ ಚಿಂತಿಸಿ ಗಂಡು ಹುಡುಕಿದಾಗಲೆಲ್ಲಾ ಅವಳು
ಏನಾದರೂ ಕಾರಣ ಹೇಳಿ ತಪ್ಪಿಸುತ್ತಿದ್ದಳು. ಮಜಾದ ಬದುಕಿನಲ್ಲಿ ಆಕೆ ಬಹಳ ದೂರ ಸಾಗಿದ್ದಳು.
ಅವಳಿಗೆ ನನ್ನ ಹಿತವಚನ ಹಿಡಿಸುತ್ತಿರಲಿಲ್ಲ. ನಾನು ಅವಳ ಗೆಳೆತನದಿಂದ ದೂರವಾದೆ. ಯಾಕೆಂದರೆ ಆಕೆಯೊಂದಿಗೆಒಂದೆರಡು ಬಾರಿ ಜೊತೆಗೆ ಇದ್ದಾಗ ಅವಳ ಪರಿಚಯದ ಪುರುಷರು ಈಕೆ ಯಾರು? ಸಿಗಬಹುದಾ? ಎಂಬಂತೆ ಪ್ರಶ್ನಿಸಿದ್ದು ನನ್ನ ಗಮನಕ್ಕೆಬಂದು ನಾನು ಹೆದರಿದ್ದೆ. ಗ್ರಾಮ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅವಳು ಇಂದು ನಗರವನ್ನು ಸೇರಿದ್ದಾಳೆ. ಮದುವೆ, ಗೃಹಿಣಿ ಎಂಬಸುಂದರವಾದ ಬದುಕಿನ ಕನಸು ಕಂಡ ಹುಡುಗಿ ಇಂದು ಮಾಯಾ ನಗರಿಯಲ್ಲಿ ಬಣ್ಣದ ಚಿಟ್ಟೆ ಆಗಿ ಬಿಟ್ಟಳು. ಇಂತಹವರಿಗೆ ಒಂದೊಳ್ಳೆಯ ಕಿವಿ ಮಾತು ಹೇಳಿ?
ಸಾಂತ್ವನ:-
ಈ ಕತೆ, ಕ್ಷಮಿಸಿ, ವಾಸ್ತವ ಸಂಗತಿ ಕೇವಲ ನಿಮ್ಮ ಓರ್ವ ಗೆಳತಿಯದ್ದು ಮಾತ್ರವೇ ಆಗಿ ಉಳಿದಿಲ್ಲ ಇಂದು. ಇಂದು ನಗರದ ಹೊರ ಕಾಣುವ ಥಳುಕು ಲೋಕದ ಹಿಂದೆ ಇಂತಹ ಸಾವಿರಾರು ಹೆಣ್ಣಿನ ಕರಾಳ ಬದುಕಿನ ಕಥೆ ಇದೆ. ಆಧುನಿಕ ಲೋಕ ದಲ್ಲಿ ‘ಶೀಲ’ ಎಂಬ ಪದಕ್ಕೆ ಬೆಲೆ ಇಲ್ಲ ಎಂದೇ ಹೇಳಬಹುದು. ನಮ್ಮ ಪೌರಾಣಿಕ ಕಥೆಗಳಲ್ಲಿ ಅಥವಾ ಸ್ವಾತಂತ್ರ್ಯ ಪೂರ್ವದ ಕಥೆಗಳಲ್ಲಿ ಮಹಿಳೆ ಯರು ತಮ್ಮ ಶೀಲ ಲೂಟಿ ಮಾಡಲು ಬರುತ್ತಾರೆಂದು ಹೆದರಿ ಕೆರೆ, ಬಾವಿಗಳಿಗೆ ಧುಮುಕಿ ಪ್ರಾಣತೆತ್ತ ಘಟನೆಗಳನ್ನು ನಾವು ಚರಿತ್ರೆಯಲ್ಲಿ ಓದಿರ ಬಹುದು.
ಕೇವಲ ಸುಳ್ಳು ಅಪವಾದಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಹೆಣ್ಣು ಮಕ್ಕಳಿದ್ದಾರೆ. ‘ಶೀಲ’ (ಮಾನ) ಹೆಣ್ಣಿನ ಬಂಗಾರ ಎಂಬ ಭಾವನೆ ಅಂದಿನ ಸ್ತ್ರೀಯರಲ್ಲಿತ್ತು. ಮೊದಲಿನ ಸಿನಿಮಾಗಳೂ ಹೆಣ್ಣಿನ ಶೀಲಕ್ಕೆ ಮಹತ್ವ ನೀಡಿ ಕಥೆಯನ್ನು ಹೆಣೆಯುತ್ತಿತ್ತು. ಇಂದು ಸಿನಿಮಾಗಳ ಕಥೆಗಳೂ ಮಾನ ಕಳೆದುಕೊಂಡಿದೆ. ನಿಜ…
ಮಧ್ಯಮ ವರ್ಗದ.. ಹೆಣ್ಣು ಮಕ್ಕಳಿಗೆ ಕನಸುಗಳು ಹೆಚ್ಚು. ಅವರ ಕನಸುಗಳೆಲ್ಲಾ ನನಸಾಗಬೇಕಾದರೆ ದುಡ್ಡು ಮುಖ್ಯ. ಮನೆಯಲ್ಲಿ ಗಂಡು ಮಗ ಕುಟುಂಬಕ್ಕೆ ನೆರವು ನೀಡದೇ ಸೋಮಾರಿಯಾಗಿ ಉಂಡಾಡಿ ಯಂತೆ ತಿರುಗಾಡಿದರೆ ಮನೆಯ ಹೆಣ್ಣು ಮಕ್ಕಳು ಕುಟುಂಬವನ್ನು ರಕ್ಷಿಸಲು ಹೊಸ್ತಿಲು ದಾಟಿ ಬರುತ್ತಾರೆ. ಅವರಿಗೆ ಸಿಗುವ ವೇತನ ಅವರ ಪರಿಸ್ಥಿತಿಯ ಸುಧಾರಣೆಗೆ ಸಾಕಾಗದು. ಹೆಚ್ಚಿನವರು ಜಾಗ್ರತೆ ಪಾಲಿಸುತ್ತಾರೆ. ಎಲ್ಲರೂ ಹೀಗೆಯೇ ಇರುವುದಿಲ್ಲ. ಇರುವುದರಲ್ಲಿ ತೃಪ್ತಿ ಪಡುತ್ತಾರೆ. ಆದರೆ ಕೆಲವರು ಮೋಹದ ಮಾತುಗಳಿಗೆ ತಾತ್ಕಾಲಿಕ ಸುಖಕ್ಕಾಗಿ ಜಾರಿ ಬೀಳುತ್ತಾರೆ.
ಮೊದಲನೆಯದಾಗಿ ನೀವು ಅವರಿಂದ ದೂರ ಆದದ್ದು ಒಳ್ಳೆಯದೇ ಆಯಿತು. ಯಾಕೆಂದರೆ ಇಂತಹ ಹೆಣ್ಣು ಮಕ್ಕಳ ಕೊನೆಯ ಬದುಕು ದುರಂತದಲ್ಲಿ ಮುಗಿಯುತ್ತದೆ. ನಮ್ಮಲ್ಲಿ ‘ಶಿಕ್ಷಣ’ ಎಂಬುದು ಸಂಬಳ ಗಳಿಕೆಗಾಗಿ ಇರುವ ತರಬೇತಿಯಂತಾಗಿ
ಹೋಗಿದೆ. ನೈತಿಕ ಪಾಠವನ್ನು ಕಲಿಸದ ಇಂದಿನ ಶಿಕ್ಷಣ ಬದುಕನ್ನು ಯಂತ್ರವನ್ನಾಗಿಸುತ್ತದೆ.
ಮೊಬೈಲ್ಗಳ ದುರುಪಯೋಗ, ಇಂಟರ್ನೆಟ್ಗಳ ಅಶ್ಲೀಲತೆಗಳು ನಮ್ಮ ಯುವ ಜನರನ್ನು ಹಾದಿ ತಪ್ಪಿಸಿದೆ. ಪರ್ದಾಧಾರಿಯಾಗಿ
ರಸ್ತೆಯಲ್ಲಿ ನಡೆದು ಹೋಗುವ ಸಭ್ಯ ಹುಡುಗಿಯನ್ನೂ ಪುಂಡರು “ಬರ್ತೀಯಾ?” ಎಂದು ಕೇಳುವಷ್ಟರ ಮಟ್ಟಿಗೆ ಈ ಸಮಾಜ ಕೆಟ್ಟು
ಹೋಗುತ್ತಿದೆ. ಹೆಣ್ಣೆಂದರೆ ‘ಲಜ್ಜೆ’ಯೇ ಇಲ್ಲದ ಆತ್ಮಾಭಿಮಾನವಿಲ್ಲದ ಒಂದು ಜೀವಿ ಎಂಬಂತೆ ಕೆಲ ಪುರುಷ ವರ್ಗ ನೋಡಲು ಆರಂಭಿಸಿರುವುದು ಕಳವಳದ ಸಂಗತಿಯಾಗಿದೆ.
ನಿಮ್ಮ ಗೆಳತಿಯ ಹೆತ್ತವರಿಗೆ ಮಗಳ ಬದುಕಿನ ಸತ್ಯ ತಿಳಿಯುವಂತಾದರೆ ಒಳ್ಳೆಯದು. ಮಗಳ ಅನೈತಿಕ ಸಂಪಾದನೆಯಿಂದ ತಮ್ಮ ಬದುಕು ಸಾಗುವುದು ಅವರಿಗೆ ಬೇಕಾಗಿದೆಯೇ? ಆದ್ದರಿಂದ ನೀವು ಈ ವಿಷಯವನ್ನು ಅವರ ಗಮನಕ್ಕೆ ತನ್ನಿರಿ. ಆಕೆಯನ್ನು ಪುನಃ ಮನೆಯತ್ತ ಹೆಜ್ಜೆ ಹಾಕುವಂತೆ ಮಾಡಿರಿ. ಏಡ್ಸ್ನಂತಹ ಭೀಕರ ಕಾಯಿಲೆಗಳಿಗೆ ಬಲಿ ಆಗುವ ಮೊದಲು ಅವಳನ್ನು ರಕ್ಷಿಸುವಂತೆ ಹೆತ್ತವರಿಗೆ ತಿಳಿಸಿರಿ. ಆಕೆಯ ಪಾಪದ ಸಂಪಾದನೆಯನ್ನು ತಿರಸ್ಕರಿಸಲು ಅವರು ಮುಂದಾಗಲಿ. ಈ ವೈಭವದ ಬದುಕು ಶಾಶ್ವತ ವಲ್ಲ. ಕಬ್ಬಿನ ಹಾಲು ಹಿಂಡಿದ ನಂತರ ಕಸದಂತೆ ಬಿಸಾಡುವಂತೆ ಹೆಣ್ಣನ್ನು ಉಪಯೋಗಿಸಿ ಈ ಸ್ವಾರ್ಥ ಪುರುಷರು ಒಗೆದು ಬಿಡ್ತಾರೆ ಎಂಬ ಸತ್ಯವನ್ನು ಅವಳಿಗೆ ಮನವರಿಕೆ ಮಾಡಿಸಬೇಕು.