ಅಕ್ಕಿ ಕದ್ದ ಮಧು ಮತ್ತು ಹೃದಯ ಕದ್ದ ಶ್ರೀದೇವಿ ನಿಜವಾಗಿ ಎರಡು ಭಾರತಗಳ ಪ್ರತಿಬಿಂಬ.
ಮಧುವಿನ ಭಾರತ ಬಹಳ ದೊಡ್ಡದು. ಆ ಭಾರತದಲ್ಲಿ ಹಸಿವು ಇದೆ. ಅನಾರೋಗ್ಯ ಇದೆ. ಶಿಕ್ಷಣದ ಕೊರತೆ ಇದೆ. ಸೂಟು, ಬೂಟು ಇಲ್ಲದ ಮತ್ತು ಆಕರ್ಷಕವಾಗಿ ನಗಳೂ ಬಾರದ ಜನವರ್ಗ ಅದು. ಶ್ರೀದೇವಿಯ ಭಾರತ ಸಣ್ಣದು.
ಬಣ್ಣ (ಮೇಕಪ್, ಮುಖವಾಡ) ಇಲ್ಲದೆ ಮತ್ತು ಬಣ್ಣದ ಮಾತಿಲ್ಲದೆ ಆ ಭಾರತ ಬದುಕುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ನೀರವ್ ಮೋದಿವರೆಗೆ, ಬಾಬಾ ರಾಮ್ ರಹೀಮ್ ನಿಂದ ಹಿಡಿದು ವಿಜಯ್ ಮಲ್ಯ ವರೆಗೆ ಈ ಭಾರತದಲ್ಲಿ ರಾಜಕಾರಣಿಗಳು, ಮಾಧ್ಯಮ ದೊರೆಗಳು, ಉನ್ನತ ಅಧಿಕಾರಿಗಳು, ಚಿತ್ರ ರಂಗದವರು… ಬದುಕುತ್ತಿದ್ದಾರೆ.
ಮಾತ್ರವಲ್ಲ, ಇವರಲ್ಲಿ ಹೆಚ್ಚಿನವರು ಮಧು ಪ್ರತಿನಿಧಿಸುವ ಬೃಹತ್ ಭಾರತವನ್ನು ಅವಮಾನದಂತೆ ಮತ್ತು ಅಸಹ್ಯದಂತೆ ಕಾಣುತ್ತಿದ್ದಾರೆ. ಅವರಿಗೆ ಆಕರ್ಷಕವಾಗಿ ಮಾತಾಡಲೂ ಗೊತ್ತು. ನಗಲೂ ಗೊತ್ತು. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದಕ್ಕೂ ಆ ಭಾರತ ಸಿದ್ಧವಾಗುತ್ತದೆ.
ಇಲ್ಲಿಯ ಮೂಲನಿವಾಸಿಗಳ ಮೇಲೆ ಆಕರ್ಷಕ ಮೈ ಬಣ್ಣದ ಅಲ್ಪ ಸಂಖ್ಯೆಯ ಆರ್ಯರು ಹೇಗೆ ಈ ಹಿಂದೆ ಪ್ರಾಬಲ್ಯ ಸ್ಥಾಪಿಸಿದರೋ ಅದೇ ಸ್ಥಿತಿ ಮತ್ತು ಮನಸ್ಥಿತಿ ಬಹುತೇಕ ಈಗಲೂ ಇದೆ. ಅದನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಬೇರೆ.
ಲೇಖಕರು: ಏ. ಕೆ. ಕುಕ್ಕಿಲ