ಮುಂಬೈ: ಗಗನಸಖಿಯನ್ನು ಸಾಮೂಹಿಕ ಅತ್ಯಾಚಾರ ಘಟನೆ ವರದಿಯಾಗಿದ್ದು, ಈ ಸಂಬಂಧ ಓರ್ವನ್ನು ಬಂಧಿಸಲಾಗಿದೆ. ಆರೋಪಿಯನ್ನು ಸ್ವಪ್ನಿಲ್ ಅರುಣ್ ಕುಮಾರ್ ಬಡೋನಿಯ ಎಂದು ಗುರುತಿಸಲಾಗಿದ್ದು, ಆತ ಗಗನಸಖಿ ಕೆಲಸ ಮಾಡುತ್ತಿರುವ ಏರ್ಲೈನ್ ಸಂಸ್ಥೆಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಇಬ್ಬರೂ ಪರಸ್ಪರ ಸಹೋದ್ಯೋಗಿಗಳಾದ ಕಾರಣ ಆಗಾಗ ಹೊರಗೆ ಹೋಗುತ್ತಿದ್ದರು. ಈ ಬಾರಿ ಇಬ್ಬರೂ ಒಟ್ಟಿಗೇ ಬಾರ್ಗೆ ಹೋಗಿದ್ದಲ್ಲದೆ, ಬಾರ್ ಮುಚ್ಚುವವರೆಗೂ ಕಂಠಪೂರ್ತಿ ಕುಡಿದಿದ್ದರು. ಆಕೆಯನ್ನು ಸ್ವಪ್ನಿಲ್ ತನ್ನ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನ ರೂಮಿನಲ್ಲಿದ್ದ ಇತರರೂ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ. ಬೆಳಗ್ಗೆ ಎದ್ದು ತನ್ನ ದೇಹದ ಗಾಯಗಳನ್ನು ನೋಡಿ ಆಕೆಯ ಮೇಲೆ ಅತ್ಯಾಚಾರ ಆಗಿದೆ ಎಂದು ಆಕೆಗೆ ಮನವರಿಕೆಯಾಗಿದೆ. ಸ್ವಪ್ನಿಲ್ ತಾನೂ ಕುಡಿದಿದ್ದರಿಂದ ಏನಾಗಿದೆ ಎಂದು ನನಗೂ ಏನೂ ನೆನಪಿಲ್ಲ, ಗೊತ್ತಿಲ್ಲ ಎಂದು ಆಕೆಯಲ್ಲಿ ಹೇಳಿದ್ದಾನೆ.
ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ತಂದೆಯ ಬಳಿ ಗಗನಸಖಿ ಹೇಳಿಕೊಂಡಿದ್ದಾಳೆ. ನಂತರ ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಘಟನೆಯ ವಿವರಣೆ ನೀಡಿದ್ದಾರೆ. “ಭದ್ರತಾ ಅಧಿಕಾರಿ ಒಬ್ಬನೇ ಆಕೆಯ ಮೇಲೆ ಅತ್ಯಾಚಾರ ಮಾಡಿರಬಹುದು ಎಂದು ನಾವು ಪ್ರಾಥಮಿಕ ತನಿಖೆಯಿಂದ ತಿಳಿದು ಕೊಂಡಿದ್ದೇವೆ. ಆದರೂ ಅಪರಾಧದಲ್ಲಿ ಅವರ ರೂಮ್ ಮೇಟ್ ಗಳ ಪಾತ್ರವನ್ನು ತನಿಖೆ ಮಾಡುತ್ತಿದ್ದೇವೆ “ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ನಿತಿನ್ ಅಲಾಕ್ನೂರ್ ಹೇಳಿದರು.