ವೇಣೂರು: ಮಂಗಳೂರು, ಬೆಳ್ತಂಗಡಿ ತಾಲೂಕಿನ ವೇಣೂರು ಎಂಬಲ್ಲಿ ಇಂದು ಬೆಳಗ್ಗೆ ನಡೆಸ ಭೀಕರ ರಸ್ತೆ ಅಪಘಾತ ನಡೆದಿದೆ. ಕೋಳಿ ಸಾಗಿಸುವ ಲಾರಿಯೊಂದು ವೇಣೂರಿನ, ಶ್ರೀರಾಮ ನಗರದ ಮೂಡಬಿದಿರೆ ತಿರುವಿನ ರಾಜ್ಯ ಹೆದ್ದಾರಿಯ ಬದಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಸಂಚರಿಸಿ ಮಗುಚಿ ಬಿದ್ದಿದೆ.

ಪರಿಣಾಮ‌ ಬೈಕ್ ಸವಾರ ವೇಣೂರಿನ ಕರಿಮಣೇಲು ನಿವಾಸಿ ಉದಯ ಕುಮಾರ್ ಸೇಮಿತ ಎಂಬವರು ತೀವ್ರ ಗಾಯಕ್ಕೊಳಗಾಗಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಬೈಕ್‌ನಲ್ಲಿದ್ದ ಪುತ್ರಿ ಸೇರಿದಂತೆ ಮತ್ತೊಬ್ಬಳು ವಿದ್ಯಾರ್ಥಿನಿ ಅಲ್ಪ ಪ್ರಮಾಣದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ಉದಯ ಕುಮಾರ್ ಸೇಮಿತರು ಕಾಲೇಜಿಗೆ ತೆರಳುವ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಕರಿಮಣೇಲುವಿನಿಂದ ವೇಣೂರು ಮುಖ್ಯಪೇಟೆಗೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಕೋಳಿ ಸಾಗಾಟದ ಲಾರಿ ಪೊಲೀಸ್ ವಾಹನಕ್ಕೆ ಡಿಕ್ಕಿಯ ಹೊಡೆದು ನಂತರ ಉದಯ ಕುಮಾರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಕೆಲವೇ ಕ್ಷಣಗಳಲ್ಲಿ ಹೆದ್ದಾರಿಯಲ್ಲಿ ಬಂದ ಅಂಬ್ಯುಲೆನ್ಸ್ ಮೂಲಕ ಇಬ್ಬರು ಮಕ್ಕಳನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಉದಯ ಕುಮಾರ್ ಸೇಮಿತ ಅವರನ್ನು ಖಾಸಗಿ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ.

ಕೋಳಿ ಸಾಗಾಟದ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಘಟನೆಯ ದೃಶ್ಯಾವಳಿಗಳು ಸ್ಥಳೀಯ ಕಾಂಪ್ಲೆಕ್ಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Reply