ಹಿಂದೊಮ್ಮೆ ಆಯೋಗದಲ್ಲಿದ್ದಾಗ ಸರ್ಕಾರಕ್ಕೆ ಈ ಸಲಹೆಯನ್ನು ಕೊಟ್ಟಿದ್ದೆ..? ಆಗಿನ ಸರ್ಕಾರ ಗಮನ ಹರಿಸಲಿಲ್ಲ! ಈ ‘ಅಹಿಂದ’ ಸರ್ಕಾರ ಬಂದ ಮೇಲೆ ಸರ್ಕಾರಕ್ಕೆ ಹತ್ತಿರವಿದ್ದವರ ಮೂಲಕ ಮತ್ತೊಮ್ಮೆ ಈ ಸಲಹೆ ಕೊಟ್ಟೆ..ಅವರು ಇದನ್ನು ಸರ್ಕಾರದ ಗಮನಕ್ಕೆ ತಂದರೋ ಇಲ್ಲವೋ ಅಥವಾ ಸರ್ಕಾರವೇ ಕಿವಿಗೊಡಲಿಲ್ಲವೋ ಗೊತ್ತಿಲ್ಲ, ಈ ಸಲಹೆಯನ್ನಂತೂ ಅನುಷ್ಠಾನಕ್ಕೆ ತರಲಿಲ್ಲ..!?
ಈಗ ಸರ್ಕಾರ ನಿರ್ಗಮಿಸುವ ಸಮಯ ಸನಿಹವಾಗುತ್ತಿದೆ, ಕಡೆಯ ಬಜೆಟ್ ಮಂಡಿಸುತ್ತಿದೆ. ಈಗಲಾದರೂ ಕೇಳುತ್ತದೆಯೇನೋ ನೋಡೋಣ..? ಈ ಸಲ ಸಾಮಾಜಿಕ ಜಾಲತಾಣದ ಮೂಲಕ ನನ್ನ ಸಲಹೆ ನೀಡುತಿದ್ದೇನೆ…
ದಿನನಿತ್ಯ ಸರ್ಕಾರ ತನ್ನ ಸಾಧನೆಗಳ ಬಗ್ಗೆ ಮುದ್ರಣ ಮಾದ್ಯಮ, ದೃಷ್ಯ ಮಾದ್ಯಮಗಳಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಾಹೀರಾತು ಪ್ರಕಟಿಸುತ್ತಿದೆಯಷ್ಟೆ…
ಬಣಗುಡುವ ಬಿಸಿಲು, ಸುರಿವ ಮಳೆಗಳನ್ನು ಲೆಖ್ಖಿಸದೆ ಅಸಂಖ್ಯಾತ ಜನ ಬಡವರು ಪುಟ್ಪಾತ್ ಗಳಲ್ಲಿ ಹಣ್ಣು, ತರಕಾರಿ, ಸೊಪ್ಪು, ಇತರೆ ಮಾರುವ ಸಣ್ಣಪುಟ್ಟ ವ್ಯಾಪಾರಿಗಳನ್ನು ದಿನನಿತ್ಯ ನೋಡುತ್ತೇವೆ. ಇವರೆಲ್ಲರೂ ಬಹುತೇಕ ಸಹಜವಾಗಿ ‘ಅಹಿಂದ’ ವರ್ಗಗಳಿಗೆ ಸೇರಿದವರೇ ಆಗಿರುತ್ತಾರೆ..
ನನ್ನ ಸಲಹೆ ಇಷ್ಟೇ…? ಸರ್ಕಾರದಿಂದಲೇ ದೊಡ್ಡದಾದ ವಿಸ್ತೀರ್ಣವಾದ ಛತ್ರಿಗಳನ್ನು ಮಾಡಿಸಿ ಅವುಗಳ ಮೇಲೆ ಸರ್ಕಾರದ ಸಾದನೆಗಳ ಜಾಹೀರಾತುಗಳನ್ನು ಚಿತ್ತಚಿತ್ತಾರವಾಗಿ ಮುದ್ರಿಸಿ, ಬಣಗುಡುವ ಸುಡುಬಿಸಿಲಿನಲ್ಲಿ ಕಾಯಕ ಮಾಡುವ ಈ ಬಡ ಬೀದಿ ವ್ಯಾಪಾರಿಗಳಿಗೆ ಹಂಚಿ… ಈ ಜನ ಬಿಸಿಲು, ಮಳೆ,ಗಾಳಿಗಳಿಂದ ಆಶ್ರಯ ಪಡೆಯುತ್ತಾರೆ, ನೆರಳಲ್ಲಿ ತಮ್ಮ ಬೀದಿ ವ್ಯಾಪಾರ ಮಾಡುತ್ತಾರೆ ಮತ್ತು ನೀವು ನೀಡಿದ ಛತ್ರಿಗಳನ್ನು ಜತನದಿಂದ ಕಾಪಾಡಿಕೊಳ್ಳುತ್ತಾರೆ ಕೂಡ. ನಿಮ್ಮ ಸರ್ಕಾರ ಹೋದ ಮೇಲೂ ನಿಮ್ಮ ಸಾದನೆಗಳ ಪ್ರಚಾರ ನಿರಂತರವಾಗಿ ಆಗುತ್ತಲೇ ಇರುತ್ತದೆ.
ನೀವು ನೀಡಿದ ಛತ್ರಿ ನೆರಳು ನೀಡುತ್ತಲೇ ಇರುತ್ತದೆ. ಒಂದು ದಿನದ ಮುದ್ರಣ ಮಾದ್ಯಮ, ಒಂದು ಕ್ಷಣದ ದೃಷ್ಯ ಮಾದ್ಯಮದಂತಲ್ಲ… ನಿಮ್ಮ ಜಾಹೀರಾತು ಮತ್ತು ನೆರಳು ಮಾತ್ರ ನಿರಂತರವಾಗಿ ಕಾಯಕದಲ್ಲಿ ತೊಡಗಿರುತ್ತದೆ… ನಿಮಗೆ, ಈ ಕಡುಬಡವರಿಗೆ ಕನಿಷ್ಠ ನೆರಳು ನೀಡಿದ ಪುಣ್ಯ ಬರುತ್ತದೆ…
– ಸಿ.ಎಸ್.ದ್ವಾರಕಾನಾಥ್