ನವದೆಹಲಿ: ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮೂರು ದಿನ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಎರಡು ದಿನ ಚುನಾವಣಾ ಪ್ರಚಾರ ಮಾಡದಂತೆ ಸೋಮವಾರ ಚುನಾವಣಾ ಆಯೋಗ ಆದೇಶಿಸಿದೆ. ನೀತಿ ಸಂಹಿತೆ ಉಲ್ಲಂಘಿಸಿ ಆಕ್ಷೇಪಾರ್ಹ ಮಾತನಾಡಿದ ಕಾರಣಕ್ಕೆ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ನಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸಿದೆ.
ಯೋಗಿ ಆದಿತ್ಯನಾಥ್ ಅವರಿಗೆ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ 72 ಗಂಟೆಗಳ ಕಾಲ ಹಾಗೂ ಬಿಎಸ್ಸಿ ಮುಖ್ಯಸ್ಥೆ ಮಾಯಾವತಿ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.

ಈ ಇಬ್ಬರು ನಾಯಕರ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಲಾಗಿದೆ. ಇಬ್ಬರೂ ಮುಖಂಡರು ಸಾರ್ವಜನಿಕ ಸಭೆಯನ್ನಾಗಲಿ ಅಥವಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಂತಿಲ್ಲ. ಏಪ್ರಿಲ್ 11ರಂದು ಯೋಗಿ. ಆದಿತ್ಯನಾಥ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಬಾರಿಯ ಲೋಕಸಭಾ ಚುನಾವಣೆ ಅಲಿ ಹಾಗೂ ಬಜರಂಗಿ ಬಲಿ ನಡುವಿನ ಹೋರಾಟ ಎಂದು ಹೇಳಿದ್ದರು. ಮಾಯಾವತಿ ಈ ಚುನಾವಣೆಯಲ್ಲಿ ಒಂದು ನಿಗದಿತ ಪಕ್ಷಕ್ಕೆ ಮುಸ್ಲಿಮರು ಮತ ಚಲಾಯಿಸಬಾರದು ಎಂದು ಮತದಾರರಿಗೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದರು.

Leave a Reply