ಹಿಂದು ಮುಸ್ಲಿಂ ಜಾತಿ-ಬೇಧವಿಲ್ಲದೆ ಹೊಂದಾಣಿಕೆಯ ಜೀವನ ನಡೆಸುವುದು ಸೌಹಾರ್ದ ಪ್ರೇಮಿಗಳ ಆಶಯ. ಕರಾವಳಿ ಎಂದರೆ ರಾಜ್ಯದ ಜನರು ಉಗಿಯುವಂತಹ ಸನ್ನಿವೇಶ ನಿರ್ಮಾಣ ವಾಗಿದ್ದು ಸುಳ್ಳಲ್ಲ. ಕಾರಣ ಹಿಂದೂ ಮುಸ್ಲಿಂ ಗಲಭೆಗಳಿಗೆ ಕರಾವಳಿ ಕುಖ್ಯಾತ ವಾಗಿ ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಸಾಮರಸ್ಯದ ಜೀವನಕ್ಕೆ ಹೆಸರುವಾಸಿಯಾದ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ಇಂದು ಸಾಕ್ಷಿಯಾಯಿತು. ಜೀವನಪೂರ್ತಿ ಹಿಂದೂ-ಮುಸ್ಲಿಂ ಎಂಬ ಭೇದಭಾವವಿಲ್ಲದೆ ಎಲ್ಲರೊಳಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಜತ್ತಪ್ಪ ಮೇಸ್ತ್ರಿ ಅವರ ಮಗ ಧನಂಜಯ ನ ವಿವಾಹ ಕಾರ್ಯಕ್ರಮಕ್ಕೆ ಊರಿನ ಎಲ್ಲಾ ಮುಸಲ್ಮಾನರಿಗೂ ಪ್ರತ್ಯೇಕವಾದ ಆಹ್ವಾನವಿತ್ತು.
ಆದರೆ ರಂಜಾನ್ ಕಾರಣದಿಂದ ಮದುವೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದ ಸ್ಥಿತಿಯನ್ನು ಮನಗಂಡು ಮೇಸ್ತ್ರಿ ಜತ್ತಪ್ಪ ಅವರು, ಉಪವಾಸಿ ವಿಶ್ವಾಸಿಗಳಿಗೆ ಪ್ರತ್ಯೇಕವಾದ ಇಫ್ತಾರ್ ಕೂಟ ಆಯೋಜಿಸಿ ಸ್ವತಹ ಮುಸ್ಲಿಮರೊಂದಿಗೆ ಇಫ್ತಾರ್ ನಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ.
ಸೌಹಾರ್ದ ಇಫ್ತಾರ್ ಕೂಟ ನಾವು ಕೇಳಿದ್ದೇವೆ, ಆದರೆ ಮಧುಮಗನೊಬ್ಬ ಈ ರೀತಿ ಆಯೋಜಿಸುವುದು ಅಪರೂಪ. ಆದರೆ ಇದೇನು ಇಲ್ಲಿನ ಊರಿನ ವ್ಯಕ್ತಿಗಳಿಗೆ ವಿಶೇಷವಾಗಿ ಕಾಣುವುದಿಲ್ಲ, ಮೇಸ್ತ್ರಿ ಜತ್ತಪ್ಪ ನವರ ತಮ್ಮ ಕಾರಿನ ಪೂವಪ್ಪ ಎಂದರೆ ಊರಿನ ಎಲ್ಲರಿಗೂ ಅಚ್ಚುಮೆಚ್ಚು. ಕಾರಣ ಮಧ್ಯ ರಾತ್ರಿ ಏನೇ ತುರ್ತು ಅಗತ್ಯ ಸೃಷ್ಟಿಯಾದರೂ, ಒಂದು ಕರೆಯನ್ನು ಸ್ವೀಕರಿಸಿ ತಕ್ಷಣ ಮನೆಯಂಗಳದಲ್ಲಿ ಹಾಜರಾಗುತ್ತಾರೆ ಕಾರಿನ ಪೂವಪ್ಪಣ್ಣ.
ಈ ಪೂವಪ್ಪಣ್ಣ ಬೇರೆ ಯಾರು ಅಲ್ಲ, ಮಧುಮಗ ಧನಂಜಯಕುಮಾರ ನ ಚಿಕ್ಕಪ್ಪ. ಜಾತಿ ಮತ ಧರ್ಮದ ಭೇದ ಭಾವವಿಲ್ಲದೆ ಜೊತೆಯಾಗಿ ಒಗ್ಗಟ್ಟಿನಿಂದ ಜೀವಿಸುವ ಈ ಊರಿನ ಎಲ್ಲರೂ ಕೂಡ ನಾಡಿನ ಸೌಹಾರ್ದತೆಯ ಪ್ರತೀಕ.
ನಮ್ಮೆಲ್ಲರ ಆತ್ಮೀಯ ಮಿತ್ರ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಧನಂಜಯ ನ ಬಾಳು ಬೆಳಕಾಗಲಿ ಎಂದು ಹಾರೈಸುತ್ತೇನೆ. ಊರಿನ ಸೌಹಾರ್ದ ಇಡೀ ಜಿಲ್ಲೆಗೆ ಮಾದರಿಯಾಗಲಿ, ಎಂಬುದು ನಮ್ಮೆಲ್ಲರ ಹಾರೈಕೆ.